ಏಳು ತಿಂಗಳ ಹಿಂದೆ ವಿವಾಹವಾಗಿದ್ದವಳಿಗೆ ಕಿರುಕುಳದ ಆರೋಪ: ವಾಟ್ಸಾಪ್ ಸಂದೇಶ ಕಳುಹಿಸಿ ನಾಲೆಗೆ ಜಿಗಿದು ಆತ್ಮಹತ್ಯೆ ಶಂಕೆ..

ಕ್ರೈಂ ನ್ಯೂಸ್ ರಾಜ್ಯ ಶಿವಮೊಗ್ಗ
ಏಳು ತಿಂಗಳ ಹಿಂದೆ ವಿವಾಹವಾಗಿದ್ದವಳಿಗೆ ಕಿರುಕುಳದ ಆರೋಪ: ವಾಟ್ಸಾಪ್ ಸಂದೇಶ ಕಳುಹಿಸಿ ನಾಲೆಗೆ ಜಿಗಿದು ಆತ್ಮಹತ್ಯೆ
ಶಂಕೆ…
ಶಿವಮೊಗ್ಗ: ಹೊಳೆಹೊನ್ನೂರು ಸಮೀಪ ಗೃಹಿಣಿಯೊಬ್ಬರು ಭದ್ರಾ ನಾಲೆಗೆ ಹಾರಿದ್ದಾರೆ ಎನ್ನಲಾಗಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ. ಈ ಮಧ್ಯೆ ವಿವಾಹಿತೆಯ ಪೋಷಕರು ಆಕೆಯ ಪತಿ ಮನೆಯವರ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ. ಅದರಲ್ಲಿ ವರದಕ್ಷಿಣೆಗಾಗಿ ಕಿರುಕುಳ ನೀಡಿ, ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ ಪರಿಣಾಮ, ತಮ್ಮ ಮಗಳು ಕಾಣೆಯಾಗಿದ್ದು, ಮಗಳ ನಾಪತ್ತೆಗೆ ಕಾರಣರಾದ ಅಳಿಯ ಮತ್ತು ಆತನ ಕುಟುಂಬದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಲಾಗಿದೆ. ಸದ್ಯ ಪ್ರಕರಣದ ದಾಖಲಿಸಿರುವ ಹೊಳೆಹೊನ್ನೂರು ಪೊಲೀಸ್ ಠಾಣೆಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಭದ್ರಾವತಿ ತಾಲ್ಲೂಕಿನ ಡಿ.ಬಿ.ಹಳ್ಳಿ ಮೂಲದ ಲತಾ (25), ಕಳೆದ ಏಪ್ರಿಲ್ 14 ರಂದು ಶಿಕಾರಿಪುರ ತಾಲ್ಲೂಕು ದಿಂಡದಹಳ್ಳಿ ಗ್ರಾಮದ ಗುರುರಾಜ್ ಎಚ್. ಅವರೊಂದಿಗೆ ವಿವಾಹವಾಗಿದ್ದರು. ಗುರುರಾಜ್ ಅವರು ಕೆಪಿಸಿಎಲ್‌ನಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ (AEE) ಕಾರ್ಯನಿರ್ವಹಿಸುತ್ತಿದ್ದಾರೆ. ಮದುವೆಯಾದ ಈ ಏಳು ತಿಂಗಳಿನಲ್ಲಿ ಗಂಡನ ಮನೆಯಲ್ಲಿ ಲತಾ ಕಿರುಕುಳ ಅನುಭವಿಸಿದ್ದಾರೆ ಎನ್ನಲಾಗಿದೆ. ಗಂಡ ಗುರುರಾಜ್, ಅತ್ತೆ ಶಾರದಮ್ಮ, ನಾದಿನಿಯರಾದ ನಾಗರತ್ನಮ್ಮ, ರಾಜೇಶ್ವರಿ, ಹಾಗೂ ನಾಗರತ್ನಮ್ಮನ ಗಂಡ ಕೃಷ್ಣಪ್ಪ ಸೇರಿ ಐವರು ಕಿರುಕುಳ ನೀಡುತ್ತಿದ್ದರು ಎಂದು ದೂರಲಾಗಿದೆ.
ಎಫ್​ಐಆರ್​ನಲ್ಲಿ ಮದುವೆ ಸಂದರ್ಭದಲ್ಲಿ, ಅಳಿಯ ಗುರುರಾಜ ಮತ್ತು ಅವರ ಕುಟುಂಬಸ್ಥರ ಡಿಮ್ಯಾಂಡ್​ನಂತೆ 20 ತೊಲ ಬಂಗಾರ ಹಾಗೂ 10 ಲಕ್ಷ ರೂಪಾಯಿ ನಗದನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಸುಮಾರು 20 ಲಕ್ಷ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದಾಗಿ ಪೋಷಕರು ತಿಳಿಸಿದ್ದಾರೆ. ಅಲ್ಲದೆ ವರ ತನ್ನ ಸರ್ಕಾರಿ ಹುದ್ದೆಗೆ ತಕ್ಕಂತೆ ಇನ್ನೋವಾ ಕಾರು ಮತ್ತು ಕ್ಯಾಶ್ ಕೊಡಬೇಕು ಎಂದು ಪೀಡಿಸುತ್ತಿದ್ದರು ಎಂದು ದೂರಲಾಗಿದೆ. ಕಾರು, ಮನೆ ನೀಡದಿದ್ದರೆ ನೆಮ್ಮದಿಯಿಂದ ಇರಲು ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡುತ್ತಿದ್ದರು ಅಂತಾ ಆರೋಪಿಸಲಾಗಿದೆ.
ಇವೆಲ್ಲದರ ನಡುವೆ ಸದ್ಯ ನಾಪತ್ತೆಯಾಗಿರುವ ಲತಾ, ವಾಟ್ಸಾಪ್ ಮೂಲಕ ಸಂಬಂಧಿಕರಿಗೆ ಕಳುಹಿಸಿದ ಡೆತ್ ನೋಟ್‌ನಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಯಾರು ಹುಟ್ಟುತ್ತ ಕೆಟ್ಟವರಾಗಿರುವುದಿಲ್ಲ. ಪ್ರತಿ ಹೆಣ್ಣು ಪುಣ್ಯ ಮಾಡಿ ಗಂಡನ ಮನೆಗೆ ಹೋಗುತ್ತಾಳೆ. ಹೊಸ ಮನೆಗೆ ಹೊಂದಿಕೊಳ್ಳಲು ಸಮಯ ಬೇಕು. ಆ ಸಮಯದಲ್ಲಿ ಮನೆಯ ಉಳಿದವರ ಜೊತೆ ಗಂಡನೂ ದ್ವೇಷಿಸಿದಾಗ ಹೆಣ್ಣು ಬದುಕಿದ್ದೂ ಸತ್ತಂತೆ, ನನ್ನ ಸಾವಿಗೆ ಗುರುರಾಜ್ ಹಾಗೂ ಆ ಐವರೇ ಕಾರಣ, ಅವರಿಗೆ ಶಿಕ್ಷೆಯಾಗಬೇಕು. ಓದುತ್ತಿರುವವರು ನನಗೆ ನ್ಯಾಯ ಕೊಡಿಸಿ ಅಂತಾ ವಾಟ್ಸಾಪ್​ನಲ್ಲಿ ಸಂದೇಶ ರವಾನಿಸಿದ್ದಾರೆ.
ಡೆತ್​ ನೋಟ್​ ಸಂದೇಶವನ್ನು ಸಂಬಂಧಿಕರಿಗೆ ಕಳುಹಿಸಿದ್ದ ಲತಾ ಆ ಬಳಿಕ ನಾಪತ್ತೆಯಾಗಿದ್ದಾರೆ. ಈ ವಿಷಯ ತಿಳಿಯುತ್ತಲೇ ಆಕೆಯ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದು, ಪೊಲೀಸ್ ಸಿಬ್ಬಂದಿಗಳ ಜೊತೆಯಲ್ಲಿ ಲತಾಗಾಗಿ ಹುಡುಕಾಟ ನಡೆಸಿದ್ದಾರೆ. ಈ ಮಧ್ಯೆ ಹಂಚಿನ ಸಿದ್ದಾಪುರ ಬಳಿಯ ಭದ್ರಾ ನಾಲೆಯ ಬಳಿ ಲತಾರವರಿಗೆ ಸೇರಿದ ಬಳಿ ಬಟ್ಟೆ, ಮೊಬೈಲ್ ಪತ್ತೆಯಾಗಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಲತಾ ಭದ್ರಾ ನಾಲೆಗೆ ಹಾರಿರುವ ಶಂಕೆಯಿಂದ ಅಗ್ನಿಶಾಮಕ ದಳ, ಪೊಲೀಸ್‌ ಸಿಬ್ಬಂದಿಯು ಸ್ಥಳೀಯರೊಂದಿಗೆ ಶೋಧ ಕಾರ್ಯ ನಡೆಸಿದ್ದಾರೆ.