ಶಿವಮೊಗ್ಗ ದಸರಾವನ್ನು ಈ ಬಾರಿ ೧೧ ದಿನಗಳ ಕಾಲ ವಿಜೃಂಭಣೆಯಿಂದ ನಡೆಸಲು ಸಿದ್ಧತೆ : ಶಾಸಕ ಚನ್ನಬಸಪ್ಪ
ಶಿವಮೊಗ್ಗ : ನಾಡಹಬ್ಬ ಶಿವಮೊಗ್ಗ ದಸರಾವನ್ನು ಈ ಭಾರಿ ಅತ್ಯಂತ ವಿಜೃಂಭಣೆಯಿಂದ ೧೧ ದಿನಗಳ ಕಾಲ ನಡೆಸಲು ಸಿದ್ಧತೆ ಮಾಡಲಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಅವರು ಇಂದು ಮಹಾನಗರ ಪಾಲಿಕೆಯ ಆವರಣದಲ್ಲಿದ್ದ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿಈ ಕುರಿತು ನೀಡಿ, ಶಿವಮೊಗ್ಗದಲ್ಲಿ ಸೆ.೨೨ರಿಂದ ಅಕ್ಟೋಬರ್ ೨ರ ವರೆಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು. ಈಗಾಗಲೇ ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸುಮಾರು ೧೪ ಸಮಿತಿಯನ್ನು ರಚಿಸಲಾಗಿದೆ. ಎಲ್ಲಾ ಸಮಿತಿಗಳು ಕ್ರೀಯಾಶೀಲವಾಗಿವೆ ಎಂದರು.
ಈ ಬಾರಿಯೂ ಅಂಬಾರಿ ಮೆರವಣಿಗೆ ವಿಶೇಷವಾಗಿ ನಡೆಯಲಿದೆ. ಸಕ್ರೇಬೈಲಿನ ಸಾಗರ್ ಆನೆ ಅಂಬಾರಿ ಹೊರುವುದು. ಜೊತೆಗೆ ಬಾಲಣ್ಣ ಮತ್ತು ಕುಂತಿ ಆನೆಗಳು ಇರುವವು.
ಸೆ.೨೨ರಂದು ಬೆಳಿಗ್ಗೆ ೧೧ ಗಂಟೆಗೆ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ಈ ಬಾರಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಆಗಿರುವ ಬಗ್ಗವಳ್ಳಿ ಸೋಮಶೇಖರ ರಾಜು ಅವರು ದಸರಾ ಉದ್ಘಾಟನೆಯನ್ನು ನಡೆಸುವರು. ಇವರು ತರಿಕೆರೆಯವರು. ಭಾರತೀಯ ಸೈನ್ಯಕ್ಕೆ ತನ್ನದೇ ಆದ ಶಕ್ತಿಯನ್ನು ತುಂಬಿದವರು. ಯುವಕರಿಗೆ ಸೂರ್ತಿಯಾಗಿದ್ದಾರೆ. ಇಂತಹವರು ದಸರಾವನ್ನು ಉದ್ಘಾಟಿಸುತ್ತಿರುವುದು ಹೆಮ್ಮೆಯ ವಿಷಯ ಎಂದ ಅವರು, ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಸೇರಿದಂತೆ ಎಲ್ಲಾ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು, ಜನಪ್ರತಿನಿಗಳು, ಗಣ್ಯರು ಭಾಗವಹಿಸಲಿದ್ದಾರೆ. ಈ ಎಲ್ಲಾ ಮುಖಂಡರು ಉಳಿದ ಎಲ್ಲಾ ಸಮಾರಂಭಗಳ ಮುಖ್ಯ ಅತಿಥಿಗಳು ಹಾಗೂ ವಿಶೇಷ ಆಹ್ವಾನಿತರು ಆಗಿದ್ದಾರೆ ಎಂದರು.

ಸೆ.೨೩ರಂದು ಮಕ್ಕಳ ದಸರಾ, ಸುಗಮ ಸಂಗೀತ, ಯಕ್ಷಸಂಭ್ರಮ ನಡೆಯುತ್ತದೆ. ಸರಿಗಮಪ ಖ್ಯಾತಿಯ ಕುಮಾರಿ ದಿಯಾ ಹೆಗಡೆ ಹಾಗೂ ಅಂತರಾಷ್ಟ್ರೀಯ ನೃತ್ಯಗಾರ್ತಿ ಕು. ಋತುಸ್ಪರ್ಶ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಸೆ.೨೪ರ ಬುಧವಾರ ನಡೆಯಲಿರುವ ವಿವಿಧ ದಸರಾ ಕಾರ್ಯಕ್ರಮಗಳಲ್ಲಿ ಚಲನಚಿತ್ರ ನಟರುಗಳಾದ ಶರಣ್, ಕಾರುಣ್ಯರಾವ್, ಸಾಯಿಪ್ರಕಾಶ್, ರೂಪ ಅಯ್ಯರ್, ಗಣೇಶ್ ಮಂದಾರ್ತಿ ಮುಂತಾದವರು ಭಾಗವಹಿಸಲಿದ್ದಾರೆ.
ಸೆ.೨೫ರಂದು ರೈತ ದಸರಾ, ಕಲಾ ದಸರಾ ನಡೆಯಲಿದೆ. ಸೆ.೨೬ರಂದು ಕಲಾ ದಸರಾ ಕಾರ್ಯಕ್ರಮ ಸಂಜೆ ೬ ಗಂಟೆಗೆ ಶಿವಪ್ಪ ನಾಯಕ ಅರಮನೆಯಲ್ಲಿ ನಡೆಯಲಿದ್ದು, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವರಪುರ ಉದ್ಘಾಟಿಸುವರು. ಸೆ.೨೬ರಂದು ಸಂಜೆ ೫ ಗಂಟೆಗೆ ಶಿವಪ್ಪನಾಯಕ ಅರಮನೆಯಲ್ಲಿ ನಡೆಯಲಿರುವ ನಗೆಹಬ್ಬ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಭಾಗವಹಿಸುವರು. ಸೆ.೨೭ರಂದು ಬೆಳಿಗ್ಗೆ ೧೦ ಗಂಟೆಗೆ ಪೌರ ಕಾರ್ಮಿಕರ ದಸರಾ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದ್ದು, ಪತ್ರಕರ್ತ ಎನ್. ರವಿಕುಮಾರ್ ಉದ್ಘಾಟಿಸುವರು ಎಂದರು.

